ಬಲಿಪ ಅಮೃತ ಭವನ ಸಮರ್ಪಣೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಫೆಬ್ರವರಿ 2 , 2015
|
ಫೆಬ್ರವರಿ 2, 2015
|
ಬಲಿಪ ಅಮೃತ ಭವನ ಸಮರ್ಪಣೆ
ಮೂಡುಬಿದಿರೆ :
ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ, ಪ್ರಸಂಗಕರ್ತ ಬಲಿಪ ನಾರಾಯಣ ಭಾಗವತರ 75 ವರ್ಷದ ನೆನಪಿಗೆ ಬಲಿಪ ನಾರಾಯಣ ಭಾಗವತ ಅಭಿವಂದನಾ ಸಮಿತಿಯು ಬಲಿಪರ ಮನೆಯಿರುವ ಮಾರೂರು ಗ್ರಾಮದ ನೂಯಿಯಲ್ಲಿ ಸುಮಾರು 14 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಬಲಿಪ ಅಮೃತ ಭವನವನ್ನು ಭಾನುವಾರ ಬಲಿಪರಿಗೆ ಸಮರ್ಪಿಸಲಾಯಿತು.
ಯುವಜನಸೇವೆ ಹಾಗೂ ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ ಅಮೃತಭವನದ ಕೀಯನ್ನು ಬಲಿಪರಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಯಕ್ಷಗಾನ ಭಾಗವತಿಕೆಯಲ್ಲಿ ಬಲಿಪ ಪರಂಪರೆಗೆ ದೊಡ್ಡ ಹಿನ್ನಲೆಯಿದೆ. ಭಾಗವತಿಕೆಯ ಮೂಲಕ ಬಲಿಪರು ಯಕ್ಷಗಾನಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಿ ಸ್ಥಳೀಯ ಕಲೆಗಳು ನಶಿಸಿ ಹೋಗುತ್ತಿರುವುದರ ನಡುವೆಯೂ ಯಕ್ಷಗಾನದ ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿ ಬಲಿಪರಿಗೆ ಸಲ್ಲುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಮಾಜವು ಮಾಡುತ್ತಿರುವುದಕ್ಕೆ ಈ ಬಲಿಪ ಅಮೃತ ಭವನವೇ ಸಾಕ್ಷಿಯಾಗಿದೆ ಎಂದರು.
ಬಲಿಪ ನಾರಾಯಣ ಭಾಗವತ, ಪತ್ನಿ ಜಯಲಕ್ಷ್ಮೀ ಅವರನ್ನು ಸಮಿತಿ ವತಿಯಿಂದ ಹಾಗೂ ಉಡುಪಿ ಕಲಾರಂಗದ ವತಿಯಿಂದ ಸನ್ಮಾನಿಸಲಾಯಿತು. ಕಟ್ಟಡದ ವಿನ್ಯಾಸಕಾರ ರಾಧಾಕೃಷ್ಣ ಬೋರ್ಕರ್ ಅವರನ್ನು ಗೌರವಿಸಲಾಯಿತು.
ಈ ಭವನ ನಿರ್ಮಿಸಿರುವುದು ನನಗಲ್ಲ . ಯಕ್ಷಗಾನ ಕಲೆಗೆ ಸಂದ ಗೌರವ. ಯಕ್ಷಗಾನ ಉಳಿದು ಬೆಳೆಯಲಿ ಎಂದು ಬಲಿಪರು ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಕಟೀಲಿನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಮಾತನಾಡಿದರು. ಬಲಿಪ ನಾರಾಯಣ ಭಾಗವತ ಅಭಿವಂದನಾ ಸಮಿತಿಯ ಗೌರವಾಧ್ಯಕ್ಷ ಹರಿಕಷ್ಣ ಪುನರೂರು, ಅಧ್ಯಕ್ಷ ಶ್ರೀಪತಿ ಭಟ್, ಡಾ.ಶ್ರೀಪತಿ ಭಟ್ ಕಜಂಪಾಡಿ ಉಪಸ್ಥಿತರಿದ್ದರು.
ಸಮಿತಿ ಸಂಚಾಲಕ ಡಾ.ಪ್ರಭಾಕರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಶ್ರೀಪತಿ ಭಟ್ ಸ್ವಾಗತಿಸಿದರು. ಡಾ. ರಾಧಾಕೃಷ್ಣ ಭಟ್ ವಂದಿಸಿದರು. ಡಾ. ನಾಗವೇಣಿ ಮಂಚಿ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
http://vijaykarnataka.com
|
|
|